ಶಿರಸಿ: ರಾಷ್ಟ್ರೀಯ ಸೇವಾ ಯೋಜನೆಯಡಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಗಳು ಗ್ರಾಮೀಣ ಜನತೆಗೆ ಮಾರ್ಗದರ್ಶನವಾಗಿದೆ ಎಂದು ಪಂಚಲಿಂಗ ಲಕ್ಷ್ಮಿನಾರಾಯಣ ಪಂಚಲಿಂಗೇಶ್ವರ ದೇವಾಲಯದ ಅಧ್ಯಕ್ಷ ಮಧುಕೇಶ್ವರ ಹೆಗಡೆ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಎನ್.ಎಸ್.ಎಸ್ ಘಟಕ ತೋಟಗಾರಿಕೆ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಒಂದು ವಾರದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಪಂಚಲಿಂಗದಲ್ಲಿ ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಸೇವಾ ಯೋಜನೆಯಡಿ ಮೌಲ್ಯ, ಸಂಸ್ಕೃತಿಗಳನ್ನು ಬಿತ್ತುವ ಕಾರ್ಯಗಳನ್ನು ಮಾಡಬೇಕು ಎಂದರು.
ಶಿವಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷೆ ವೀಣಾ ಭಟ್ಟ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳ ಸಮಸ್ಯೆಯನ್ನು ಅರಿತು ಸಮಾಜಕ್ಕೆ ಅನುಕೂಲಕರವಾದ ಕೆಲಸಗಳನ್ನು ಮಾಡಬೇಕು ಎಂದರು. ಜತೆಗೆ ಪಂಚಾಯತಿ ವತಿಯಿಂದ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ ತೋಟಗಾರಿಕೆ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಎಮ್.ಎಚ್.ತಟಗಾರ, ವಿದ್ಯಾರ್ಥಿಗಳು ಶಿಸ್ತು, ಸೇವಾ ಮನೋಭಾವ ಮತ್ತು ಮುಂದಾಳತ್ವದ ಗುಣಗಳನ್ನು ಅಳವಡಿಸಿಕೊಂಡು ರೈತರಲ್ಲಿ ಆಧುನಿಕ ತಂತ್ರಜ್ಞಾನದ ಬಗ್ಗೆ ಮತ್ತು ಸಾವಯವ ಕೃಷಿಯ ಕುರಿತು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.